ಸೆಪ್ಟೆಂಬರ್ ೧೫ ಸರ್ ಎಂ. ವಿಶ್ವೇಶ್ವರಯ್ಯನವರ ಹುಟ್ಟಿದ ದಿನ. ಈ ಸಂದರ್ಭದಲ್ಲಿ ಕನ್ನಂಬಾಡೀ ಕಟ್ಟೆಗೆ ಸಂಬಂಧಿಸಿದಂತೆ ಒಂದು ಟ್ವೀಟ್ ಸರಪಳಿ....

೧....
೨.ವಿಶ್ವೇಶ್ವರಯ್ಯನವರು ಮೈಸೂರಿನವರೇ ಆದರೂ, ಅವರು ಇಂಜಿನಿಯರಿಂಗ್ ಓದಿದ್ದು, ಕೆಲಸ ಮಾಡಿದ್ದು ಮೈಸೂರಿನ ಹೊರಗೇ. ಸದ್ಯ ಮುಂಬಯಿಯಲ್ಲಿ ಕೆಲಸದಲ್ಲಿದ್ದರು. ಈಗಾಗಲೇ ಅವರು ಭಾರತದಾದ್ಯಂತ ಖ್ಯಾತರಾಗಿದ್ದರು.
೩.ಅವರನ್ನು ಮೈಸೂರು ಸಂಸ್ಥಾನದ ಛೀಫ್ ಎಂಜಿನಿಯರ್ ಹುದ್ದೆಯನ್ನು ಸ್ವೀಕರಿಸಲು ೧೯೦೯ರ ಸುಮಾರಿನಲ್ಲಿ ದಿವಾನ್ ಮಾಧವರಾಯರು ಎರಡು ಬಾರಿ ವಿನಂತಿಸಿದ್ದರೂ ಅವರು ಅದನ್ನು ಒಪ್ಪಿರಲಿಲ್ಲ. ನಂತರ ದಿವಾನರಾದ ಆನಂದರಾಯರು ಮೈಸೂರು ಮಹಾರಾಜರು ವಿಶ್ವೇಶ್ವರಯ್ಯನವರ ಸೇವೆಯು ಸಂಸ್ಥಾನಕ್ಕೆ ಸಿಗಬೇಕೆಂದು ಬಯಸಿದ್ದಾರೆಂದು ಮತ್ತೆ ಪತ್ರ ಬರೆದರು.
೪.ಈ ಬಗ್ಯೆ ಆಸಕ್ತಿಯಿರದಿದ್ದರೂ, ಯೋಚಿಸಿ, ಬೃಹತ್ ಕೈಗಾರಿಕೆಗಳು ಹಾಗೂ ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ಸಂಸ್ಥಾನದಲ್ಲಿ ಸ್ಥಾಪಿಸಲು ತಮಗೆ ಸರಕಾರ ಬೆಂಬಲಿಸಬೇಕು ಎಂಬ ಕೋರಿಕೆಗೆ ಮಹಾರಾಜರಿಂದ ಒಪ್ಪಿಗೆ ದೊರೆತ ಮೇಲೆ, ೧೫ನೆಯ ನವೆಂಬರ್ ೧೯೦೯ರಂದು ಮೈಸೂರಿನ ಛೀಫ್ ಎಂಜಿನಿಯರ್ ಹುದ್ದೆಯನ್ನು ವಿಶ್ವೇಶ್ವರಯ್ಯನವರು ಸ್ವೀಕರಿಸಿದರು.
೫. ೧೯೦೨ರ ಹೊತ್ತಿಗೆ ಶಿವನಸಮುದ್ರದಿಂದ ಜಲವಿದ್ಯುತ್ ತಯಾರಾಗಿ, ಸಿಂಹಪಾಲು (೧೧,೦೦೦ ಎಚ್.ಪಿ) ಕೋಲಾರದ ಚಿನ್ನದ ಗಣಿಗೆ ಪೂರೈಕೆಯಾಗುತ್ತಿತ್ತು. ಮೈಸೂರು ಸರಕಾರ ಮತ್ತು ಜಾನ್ ಟೇಲರ್ ಎಂಡ್ ಸನ್ಸ್ ಸಂಸ್ಥೆಯ ನಡುವಿನ ಒಪ್ಪಂದದ ಪ್ರಕಾರ, ಸರಕಾರವು ವಿದ್ಯುತ್ ಪೂರೈಸಬೇಕಾಗಿದ್ದು, ಅದಕ್ಕೆ ಕಡಿಮೆಯಾದರೆ ದಂಡ ತೆರಬೇಕಾಗಿತ್ತು.
೬.ಶಿವನಸಮುದ್ರ ಆಣೆಕಟ್ಟೆಯ ಒಳಹರಿವು ಆಗಾಗ ಕಡಿಮೆಯಾಗುತ್ತಿದ್ದರಿಂದ, ವಿದ್ಯುತ್ ಪೂರೈಕೆ ಕಡಿಮೆಯಾಗಿ , ಸರಕಾರವು ದಂಡ ತೆರುತ್ತಿತ್ತು (೧೯೦೩- ೧೪ರವರೆಗೆ ತೆತ್ತ ದಂಡ ಸುಮಾರು ೩೮ ಸಾವಿರ ಪೌಂಡುಗಳು).
೭.ಪರಿಹಾರವಾಗಿ ಕನ್ನಂಬಾಡಿ ಹಳ್ಳಿ ಹತ್ತಿರ ಇನ್ನೊಂದು ಆಣೆಕಟ್ಟು ಕಟ್ಟಿ ವಿದ್ಯುತ್ ಉತ್ಪಾದಿಸುವ ಯೋಜನೆಯ ಕರಡು ಪ್ರಸ್ತಾವ ಸರ್ M.V. ಮೈಸೂರು ಸೇರುವ ಮೊದಲೇ ಇತ್ತು. ಅವರು ಅದನ್ನು ಓದಿ, ಸಮರ್ಪಕವಾಗಿಲ್ಲ ಎಂದು ಮನಗಂಡು, ಹೊಸ ಸಮೀಕ್ಷೆ ಮಾಡಿ, ವಿದ್ಯುತ್ ಮತ್ತು ನೀರಾವರಿಗೆ ತಕ್ಕಂತೆ ಹರಹನ್ನು ಹೆಚ್ಚಿಸಿ, ಹೊಸ ಯೋಜನೆ ಮಾಡಿದರು.
೮.ಮುಂಬಯಿ, ಹೈದರಾಬಾದಿನಲ್ಲಿ ದೊಡ್ಡ ಜಲಾಶಯಗಳನ್ನು ವಿನ್ಯಾಸ ಮಾಡಿದ್ದ, ತಮ್ಮ ಹೊರದೇಶ ಪ್ರವಾಸಗಳಲ್ಲಿ ಈಜಿಪ್ಟಿನ ಆಸ್ವಾನ್ ಮೊದಲಾದ ಕೆಲವು ಭಾರೀ ಆಣೆಕಟ್ಟುಗಳನ್ನು ಅಭ್ಯಾಸ ಮಾಡಿದ್ದ ಅವರಿಗೆ ಕನ್ನಂಬಾಡಿಯ ಆಣೆಕಟ್ಟಿನ ವಿವರವಾದ ವಿನ್ಯಾಸ ದೊಡ್ಡ ಕೆಲಸವಾಗಿರಲಿಲ್ಲ. ಆದರೆ ಅಂದಾಜು ವೆಚ್ಚ ಸುಮಾರು ರೂ. ೯೦ರಿಂದ ೨೫೩ ಲಕ್ಷಕ್ಕೆ ಏರಿತು.
೯.ಈ ಯೋಜನೆಗೆ ದಿವಾನರ ಬೆಂಬಲವಿದ್ದರೂ, ಮಹಾರಾಜರಿಂದ ಮಂಜೂರಾತಿ ಬರಲಿಲ್ಲ. ಇಷ್ಟು ದೊಡ್ಡ ಖರ್ಚಿನ ಯೋಜನೆ ಮೈಸೂರು ಸಂಸ್ಥಾನದಲ್ಲಿ ಇಲ್ಲಿಯವರೆಗೆ ಆಗಿಯೇ ಇರಲಿಲ್ಲ. (೧೯೧೦-೧೧ರ ವರ್ಷದಲ್ಲಿ ಸಂಸ್ಥಾನದ ವಾರ್ಷಿಕ ಉತ್ಪನ್ನವೇ ಸುಮಾರು ೨೪೭ ಲಕ್ಷ ರೂ. ಇತ್ತು). ಬೇಸರಗೊಂಡ ಸರ್ M.V ಸಂಸ್ಥಾನದ ಸೇವೆ ಬಿಡುವ ಯೋಚನೆ ಮಾಡತೊಡಗಿದರು.
೧೦.ಅದಕ್ಕೆ ಪೂರ್ವಭಾವಿಯಾಗಿ ಕೆಲವು ದಿನ ರಜಾ ತೆಗೆದುಕೊಂಡು, ಉತ್ತರ ಭಾರತದ ಪ್ರವಾಸ ಹೋಗಿ ತಿರುಗಿ ಬಂದರು. ಆಗಲೂ ಪರಿಸ್ಥಿತಿಯಲ್ಲಿ ಬದಲಾವಣೆ ಇರಲಿಲ್ಲ. ಇದರಿಂದ ತೀವ್ರ ಅಸಮಾಧಾನಗೊಂಡ ಅವರು ತಮ್ಮ ಕೆಲಸದಲ್ಲಿ ಉತ್ಸಾಹ ಕಳೆದುಕೊಂಡು, ಬರಿಯ ದಿನನಿತ್ಯದ ಕೆಲಸಗಳಿಗೆ ಮಾತ್ರಾ ತಮ್ಮ ಲಕ್ಷ್ಯ ಕೊಡತೊಡಗಿದರು. ಇದು ಮಹಾರಾಜರ ಗಮನಕ್ಕೆ ಬಂತು.
೧೧. ಮಹಾರಾಜರು ಬೆಂಗಳೂರು ಕ್ಯಾಂಪಿನಲ್ಲಿದ್ದಾಗ, ಸರ್ M.V ಯವರನ್ನು ಕರೆಸಿ, ವಿಚಾರಿಸಿದರು. ಸರ್ M.V ತಮ್ಮ ಅಸಮಾಧಾನಕ್ಕೆ ಕಾರಣವನ್ನು ವಿವರಿಸಿ, ತಾವು ಸಂಸ್ಥಾನದ ಕೆಲಸವನ್ನು ಬಿಡುವ ಆಲೋಚನೆಯಲ್ಲಿರುವುದನ್ನು ತಿಳಿಸಿದರು. ಮಹಾರಾಜರು ವಿಶ್ವೇಶ್ವರಯ್ಯನವರಿಗೆ ದುಡುಕಬೇಡಿ ಎಂದು ಹೇಳಿ ಅವರಿಗೆ ಬೇಕಾದದ್ದನ್ನು ಕೊಡುವುದಾಗಿ ಆಭಯ ಕೊಟ್ಟರು.
೧೨. ಮುಂದಿನ ವಾರ ತಮ್ಮನ್ನು ಮೈಸೂರಿನಲ್ಲಿ ಬಂದು ಕಾಣಲು ತಿಳಿಸಿದರು. ಅಂತೆ ನಡೆದ ಭೇಟಿಯಲ್ಲಿ ತಾವು ಮಾತುಕೊಟ್ಟಂತೆ ವಿಶ್ವೇಶ್ವರಯ್ಯನವರ ಪ್ರತಿಯೊಂದು ಪ್ರಸ್ತಾವವನ್ನೂ ಮಂಜೂರು ಮಾಡಿದರು. ಅವುಗಳಲ್ಲಿ ಅತಿಮುಖ್ಯವಾದ ಕನ್ನಂಬಾಡಿ ಕಟ್ಟೆಯ ಪ್ರಸ್ತಾವ ಯಾವುದೇ ಬದಲಾವಣೆಗಳಿಲ್ಲದೆ ವಿಶ್ವೇಶ್ವರಯ್ಯನವರು ಸೂಚಿಸಿದ ರೀತಿಯಲ್ಲಿಯೇ ಮಂಜೂರಾಯಿತು.
೧೩. ಸರ್ M.V ವಿನ್ಯಾಸದ ಕಟ್ಟೆಯ ಎತ್ತರ ೧೨೪ ಅಡಿ. ನೀರು ಹಿಡಿದಿಡುವ ಸಾಮರ್ಥ್ಯ ೪೮ ಸಾವಿರ ಮಿಲಿಯ ಘನ ಅಡಿ. ೮೦ ಸಾವಿರ HP ವಿದ್ಯುತ್- ಚಿನ್ನದ ಗಣಿಗೆ ಪೂರೈಸಿ ಮಿಕ್ಕಿದ್ದನ್ನು ಬೆಂಗಳೂರು, ಮೈಸೂರುಗಳಲ್ಲಿ ದೀಪಗಳು, ಕೈಗಾರಿಕೆಗಳಿಗೆ ಒದಗಿಸುವುದಿತ್ತು. ಕಾವೇರಿ ಕಣಿವೆಯ ೧.೫ ಲಕ್ಷ ಎಕರೆಗೆ ನೀರಾವರಿಯನ್ನೂ ಒದಗಿಸುವ ಯೋಜನೆಯಿತ್ತು.
೧೪.ಈ ಯೋಜನೆಯನ್ನು ಶುರುಮಾಡಲು ದೊಡ್ಡ ಅಡ್ಡಿ ಬಂತು. ಈಗಾಗಲೇ ಮದರಾಸು ಸರ್ಕಾರವು, ಕನ್ನಂಬಾಡಿಯಿಂದ ೬೦ ಮೈಲಿ ಕೆಳಗಿದ್ದ ಮೆಟ್ಟೂರಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಇದಕ್ಕೂ ದೊಡ್ಡದಾದ ಆಣೆಕಟ್ಟು ಕಟ್ಟುವ ಯೋಜನೆ ತಯಾರುಮಾಡಿತ್ತು. ಕನ್ನಂಬಾಡಿ ಕಟ್ಟೆಯ ಯೋಜನೆಯಿಂದ ಮೆಟ್ಟೂರು ಯೋಜನೆಯನ್ನು ಬದಲಾಯಿಸುವ ಪ್ರಮೇಯ ಬಂತು.
೧೫. ಇದನ್ನು ಮದ್ರಾಸ್ ಸರ್ಕಾರ ಒಪ್ಪದ ಕಾರಣ, ಮೈಸೂರು ಸರ್ಕಾರವು ಗವರ್ನರ್ ಜನರಲ್ ಲಾರ್ಡ್ ಹಾರ್ಡಿಂಜನಿಗೆ ಅಪೀಲು ಹಾಕಿ ಕನ್ನಂಬಾಡಿ ಕಟ್ಟೆ ಕಟ್ಟುವುದಕ್ಕೆ ಅಪ್ಪಣೆ ಕೋರಿತು. ಮೊದಲ ಹಂತವಾದ ೮೦ ಅಡಿ ಎತ್ತರದ ಕಟ್ಟೆಗೆ ಸರಕಾರ ಹಂಗಾಮಿ ಒಪ್ಪಿಗೆ ನೀಡಿತು. ಪ್ರಕರಣ ವ್ಯಾಜ್ಯ ಪರಿಹಾರ ಸಮಿತಿಯಲ್ಲಿ (Arbitration Committee) ಮುಂದುವರಿಯಿತು.
೧೬.ಕಟ್ಟೆ ಕೆಲಸ ಶುರುವಾಯಿತು. ಸರ್ M.V ಧೈರ್ಯ ಅಂದರೆ ಬರೀ ೮೦ ಅಡಿಗೆ ಒಪ್ಪಿಗೆ ಇದ್ದರೂ, , ನೆಲಗಟ್ಟನ್ನು ೬೪ ಲಕ್ಷ ರೂ ವೆಚ್ಚದಲ್ಲಿ, ಪೂರ್ಣ ೧೨೪ ಅಡಿ ಎತ್ತರ ಲೆಕ್ಕಿಸಿಯೇ ಕಟ್ಟಿದರು. ಒಂದು ವೇಳೆ ಬ್ರಿಟಿಷ್ ಸರ್ಕಾರ ಅಂತಿಮ ತೀರ್ಪಿನಲ್ಲಿ , ೮೦ ಅಡಿಗೇ ಸೀಮಿತಗೊಳಿಸಿದ್ದಲ್ಲಿ, ಈ ನೆಲಗಟ್ಟಿಗೆ ಸುರಿದ ಅಪಾರ ಹಣ, ಬೆವರು ಪೋಲಾಗುತ್ತಿತ್ತು.
೧೭. ಮುಂದೆ ವ್ಯಾಜ್ಯ ಪರಿಹಾರ ಸಮಿತಿಯ ತೀರ್ಪು ಮೈಸೂರು ಸಂಸ್ಥಾನದ ಪರವಾಗಿಯೇ ಬಂದು ಆಣೆ ಕಟ್ಟೆಯ ಕೆಲಸ ಸುಸೂತ್ರವಾಗಿ ಮುಂದುವರೆಯಲು ಅನುವಾಯಿತು. ವಿಶ್ವೇಶ್ವರಯ್ಯನವರು ಸಂಪೂರ್ಣ ಅಂಕಿ ಅಂಶಗಳೊಂದಿಗೆ ಸಲ್ಲಿಸಿದ ವಾದಸರಣಿ ಯಶಸ್ಸನ್ನು ದೊರಕಿಸಿತ್ತು.
೧೮. ಈ ಮಧ್ಯೆ ೧೯೧೨ರಲ್ಲಿ ದಿವಾನ್ ಆನಂದರಾಯರು ನಿವೃತ್ತರಾದಾಗ, ಮಹಾರಾಜರು ಸರ್ M.Vಯವರಿಗೆ ದಿವಾನರ ಪಟ್ಟ ಕೊಟ್ಟರು. ಇಲ್ಲಿಯವರೆಗೆ ಕೇವಲ ಸಿವಿಲ್ ಸರ್ವೀಸ್ ಹಿನ್ನೆಲೆಯವರಿಗೆ ಮಾತ್ರವೇ ಮೀಸಲಾಗಿದ್ದ ದಿವಾನರ ಪದವಿ ಮೊಟ್ಟಮೊದಲ ಬಾರಿಗೆ ಇಂಜಿನಿಯರ್ ಹಿನ್ನೆಲೆಯಿಂದ ಬಂದ ವಿಶ್ವೇಶ್ವರಯ್ಯನವರಿಗೆ ಸಿಕ್ಕಿತು.
೧೯. ಜಾನ್ ಟೇಲರ್ ಕಂಪನಿಯ ಒಪ್ಪಂದದ ಪ್ರಕಾರ ಕನ್ನಂಬಾಡೀ ಕಟ್ಟೆ ೦೧.೦೭.೧೯೧೫ರೊಳಗೆ ಮುಗಿಯಬೇಕಿತ್ತು. ಕೆಲಸ ಸಾಗುತ್ತಿರುವಾಗ ಕಾವೇರಿ ನದಿಯಲ್ಲಿ ನೆರೆ ಹಾವಳಿಯಾಗಿ ಅನೇಕ ಅಡ್ಡಿ ಆತಂಕಗಳು ಎದುರಾದವು. ಜಾನ್ ಟೇಲರ್ ಕಂಪನಿಯವರು ಸಂಸ್ಥಾನಕ್ಕೆ ಪತ್ರ ಬರೆದು, ನಿಗದಿತ ದಿನದಂದು ಕಟ್ಟೆ ಮುಗಿಸದಿದ್ದರೂ ಅಡ್ಡಿಯಿಲ್ಲ ಎಂಬ ಉದಾರತೆ ತೋರಿದರು.
೨೦. ಈ ಸವಾಲು ಎದುರಿಸಿದ ಸರ್ M.V, ಒಪ್ಪಿದ ದಿನದಂದು ಮುಗಿಸುವ ಪಣ ತೊಟ್ಟರು. ಕೆಲಸದವರ ಸಂಖ್ಯೆ ೨೦೦೦ದಿಂದ ೧೦,೦೦೦ ಕ್ಕೆ ಏರಿತು. ರಾತ್ರಿ ಕೂಡಾ ಕೆಲಸವು “ವಾಶಿಂಗ್ಟನ್” ದೀಪಗಳ ಬೆಳಕಿನಲ್ಲಿ ಮುಂದುವರೆಯಿತು. ಕೆಲಸದ ಜಾಗದಲ್ಲಿ ಇಂಜಿನಿಯರ್, ಡಾಕ್ಟರ್, ಪೋಲಿಸ್ ಎಲ್ಲರ ಕ್ಯಾಂಪ್ ಮಾಡಿಸಿ, ಕೆಲಸ ನಿರ್ವಿಘ್ನವಾಗಿ ನಡೆಯುವಂತೆ ನೋಡಿಕೊಂಡರು.
೨೧.ಮೈಸೂರಿನ ಪ್ರತಿನಿಧಿ ಸಭೆ (Representative Assembly) ನಡೆಯುತ್ತಿದ್ದಾಗ, ೫ ಘಂಟೆಯವರೆಗೆ ಅಲ್ಲಿದ್ದು, ಮುಗಿದ ತಕ್ಷಣ ಕಟ್ಟೆಯತ್ತ ಹೊರಡುತ್ತಿದ್ದರು. ಅರ್ಧ ಘಂಟೆಗೊಮ್ಮೆ ಕೆಲಸದ ಪ್ರಗತಿಯ ವರದಿಯನ್ನು ಫೋನ್ ಮೂಲಕ ತರಿಸಿಕೊಳ್ಳುತ್ತಿದ್ದರು. ಕೆಲಸದಲ್ಲಿ ಅಡಚಣೆ ಬಂದಲ್ಲಿ ತಕ್ಷಣವೇ ಫೋನ್ ಮೂಲಕ ಸುದ್ದಿ ತಿಳಿಸಲು ತಾಕೀತು ಮಾಡಿದ್ದರು.
೨೨. ಈ ಎಲ್ಲ ಪರಿಶ್ರಮದ ಫಲವಾಗಿ ಆಣೆಕಟ್ಟಿನ ಕೆಲಸ ನಿಗದಿತ ಅವಧಿಯಲ್ಲಿ ಮುಗಿಯಿತು. ಜಾನ್ ಟೇಲರ್ ಕಂಪನಿಗೆ ವಿದ್ಯುತ್ ಸರಬರಾಜು ಒಪ್ಪಂದದಂತೆ ಪ್ರಾರಂಭವಾಯಿತು. ಜಾನ್ ಟೇಲರ್ ಕಂಪನಿಯವರು ಮಹಾರಾಜರಿಗೆ ಪತ್ರ ಬರೆದು ಈ ಕೆಲಸವನ್ನು ಮೆಚ್ಚಿ ಕೊಂಡಾಡಿದರು.
೨೩. ಇಷ್ಟರಲ್ಲಿಯೇ ವ್ಯಾಜ್ಯ ಪರಿಹಾರ ಸಮಿತಿಯ ತೀರ್ಪು ಹೊರಬಂದು, ಅದರ ಪ್ರಕಾರ ಕಟ್ಟೆಯ ಎತ್ತರವನ್ನು ಮೂಲ ವಿನ್ಯಾಸದ ೧೨೪ ಅಡಿಗಳಿಗೆ ಹೆಚ್ಚಿಸಲು ಅನುಮತಿ ದೊರಕಿತು. ಮುಂದೆ ೧೯೧೬ರಲ್ಲಿ ಅದನ್ನು ವೈಸರಾಯರ ಸರಕಾರವೂ ಅನುಮೋದಿಸಿತು. ಹೀಗೆ ಎರಡನೆಯ ಹಂತದ ಕಟ್ಟೆಯ ಯೋಜನೆ ಮುಂದುವರಿಯಿತು.
೨೪. ೧೯೧೮ರಲ್ಲಿ ಸರ್ M.V ಮಿಲ್ಲರ್ ಕಮಿಟಿ ವಿಷಯದಲ್ಲಿ ಮಹಾರಾಜರೊಂದಿಗೆ ಭಿನ್ನಾಭಿಪ್ರಾಯದ ಕಾರಣ, ದಿವಾನರ ಹುದ್ದೆಗೆ ರಾಜಿನಾಮೆ ನೀಡಿದರು. ಆದರೆ ಮಹಾರಾಜರಿಗೆ ತಿಳಿಸಿದ ಮೇಲೂ ಹಠಾತ್ತನೆ ಹೊರಬರದೇ, ಸುಮಾರು ಎಂಟು ತಿಂಗಳ ಕಾಲ ವಿವಿಧ ಹಂತಗಳಲ್ಲಿದ್ದ ಅನೇಕ ಯೋಜನೆಗಳನ್ನು ನಿಯಂತ್ರಣಕ್ಕೆ ತಂದು, ಆಮೇಲೆ ಹೊರಬಂದರು.
೨೫. ನಿವೃತ್ತಿಗೆ ಪೂರ್ವಭಾವಿಯಾಗಿ ೧೦ನೆಯ ಡಿಸೆಂಬರ್ ೧೯೧೮ರಿಂದ ಆರು ತಿಂಗಳು ರಜಾ ತೆಗೆದುಕೊಂಡು, ೧೦ ಜೂನ್ ೧೯೧೯ರಂದು ನಿವೃತ್ತರಾದರು. ಇಲ್ಲಿಗೆ ಕನ್ನಂಬಾಡಿ ಕಟ್ಟೆಯ ಅವರ ನೇರ ನಿಯಂತ್ರಣ ಮುಗಿಯಿತು. ಇನ್ನೂ ನಡೆಯುತ್ತಿದ್ದ ಎರಡನೆಯ ಹಂತದ ಕಟ್ಟುವ ಕಾರ್ಯವನ್ನು ಅವರ ನಂತರದ ಅಧಿಕಾರಿಗಳು ಮುಂದುವರಿಸಿದರು.
೨೬. ಸರ್ M.V ನಿವೃತ್ತರಾದರೂ, ಅವರ ವಿನ್ಯಾಸದ ಪ್ರಕಾರವೇ ಯೋಜನೆ ಮುಂದುವರಿಯಿತು. ಸರಕಾರ ಪ್ರತಿ ಹಂತದಲ್ಲಿಯೂ ಅವರ ಸಲಹೆಯನ್ನು ಪಡೆಯುತ್ತಲೇ ಹೋಯಿತು. ೧೯೨೪ರಲ್ಲಿ ಮಹಾರಾಜರು ಅವರಿಗೆ ಪತ್ರವನ್ನು ಬರೆದು “ವಿಶೇಷ ರೀತಿಯಲ್ಲಿ ನಿಮ್ಮದೇ ಆದ ಈ ಯೋಜನೆಯಲ್ಲಿ ನೀವು ಆಸಕ್ತಿಯಿಂದ ಗಮನಕೊಡುತ್ತೀರಿ “ ಎಂಬ ಅಭಿಲಾಷೆಯನ್ನು ವ್ಯಕ್ತಪಡಿಸಿದರು.
೨೭. ನೀರಾವರಿಗಾಗಿ ಎರಡು ಕಾಲುವೆ, ಕೆಳದಂಡೆಗಳನ್ನು ಕಟ್ಟೆಯ ಕೆಲಸದೊಂದಿಗೇ ಕಟ್ಟಿ ಮುಗಿಸಲಾಗಿತ್ತು. ಸರಕಾರದ ಅಪೇಕ್ಷೆಯಂತೆ ಕಾವೇರಿ ಕಣಿವೆಯಲ್ಲಿ, ಆಣೆಕಟ್ಟಿನಿಂದ ನೀರಾವರಿ ಪೂರೈಕೆಯ ಸಲುವಾಗಿ ಮೇಲು ಕಾಲುವೆ ನಿರ್ಮಾಣದ ಯೋಜನೆಯ ಜೋಡಣೆ ಹಾಗೂ ಕಟ್ಟೋಣಕ್ಕೆ ಸಂಬಂಧಪಟ್ಟಂತೆ ಸಲಹೆ, ಶಿಫಾರಸು ಮಾಡಲು ರಚಿಸಲಾದ ಸಮಿತಿಯ ಅಧ್ಯಕ್ಷರಾದರು.
೨೮. ಈ ಸಮಿತಿ ಮೂರು ಹಂತಗಳ, ೬೦ ಮೈಲುದ್ದದ ಕಾಲುವೆ ನಿರ್ಮಾಣವನ್ನು ಶಿಫಾರಸು ಮಾಡಿದ್ದನು ಸರ್ಕಾರ ಒಪ್ಪಿಕೊಂಡಿತು. ಇದರಲ್ಲಿ ಎರಡನೆಯ ಹಂತದಲ್ಲಿ ೯೬೮೦ ಅಡಿ ಉದ್ದದ “ಹುಲಿಕೆರೆ ಕಾಲುವೆ” ಎಂಬ ಸುರಂಗ ನಿರ್ಮಾಣವೂ ಸೇರಿತ್ತು. ಇದಾದ ಮೇಲೂ ಅವರು ಕಾಲುವೆ ಹಾಗೂ ಸುರಂಗ ನಿರ್ಮಾಣದ ಬಗ್ಯೆ ಆಗಾಗ ಮೇಲ್ವಿಚಾರಣೆ ನಡೆಸುತ್ತಲೇ ಇದ್ದರು.
೨೯. ಈ ಯೋಜನೆ ೧೯೩೨ರಲ್ಲಿ ಕಾರ್ಯಗತವಾಯಿತು. ಮುಂದೆ ಕನ್ನಂಬಾಡಿ ಕಟ್ಟೆಯನ್ನು ಮಹಾರಾಜರ ಹೆಸರಿನಲ್ಲಿ “ಕೃಷ್ಣರಾಜಸಾಗರ” ಎಂದೂ, ಮೇಲ್ದಂಡೆಯ ಕಾಲುವೆಯನ್ನು “ವಿಶ್ವೇಶ್ವರಯ್ಯ ನಾಲೆ” ಎಂದೂ ನಾಮಕರಣ ಮಾಡಲಾಯಿತು. ಈ ಯೋಜನೆ ಮಂಡ್ಯ ಮತ್ತಿತರ ಪ್ರದೇಶಗಳ ಭಾಗ್ಯದ ಬಾಗಿಲನ್ನೇ ತೆರೆಯಿತು.
೩೦. ಇದು ಕನ್ನಂಬಾಡಿ ಕಟ್ಟೆಗೆ ಸಂಬಂಧಿಸಿದಂತೆ ನಡೆದ ಘಟನಾಸರಣಿ. ಈ ಒಂದು ಅವಧಿಯಲ್ಲಿ ನಾಲ್ವಡಿಯವರಂತಹ ರಾಜರ್ಷಿ ಮಹಾರಾಜರ ಪೂರ್ಣ ಬೆಂಬಲ ಸರ್ M.Vಯವರಿಗೆ ಸಿಕ್ಕಿದ್ದೂ, ಸರ್ M.Vಯವರಂಥಾ ಸಮರ್ಥರು ಮಹಾರಾಜರಿಗೆ ಸಿಕ್ಕಿದ್ದೂ ಮೈಸೂರು ಸಂಸ್ಥಾನದ ಪುಣ್ಯ ವಿಶೇಷವೇ ಸರಿ.
೩೧. References:
http://1.My  Working Life - Sir M Vishvevaraya (autobiography)
2.Mokshagundam Vishvesvaraya – V S Narayana Rao
3.Mysore Gazetteer Vol II Part IV (Modern) – Edited by C. Hayavadana Rao

ಮುಗಿಯಿತು...
You can follow @N11947.
Tip: mention @twtextapp on a Twitter thread with the keyword “unroll” to get a link to it.

Latest Threads Unrolled: